Wednesday, August 26, 2020

ಪದಯಾನ - ಪದ್ಯಾಣರ ಸ್ವಗತ – (ಎಸಳು 31 )

  (ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಅಭಿನಂದನಾ ಕೃತಿ ‘ಪದಯಾನ’ದಿಂದ)

ಪೂರ್ವರಂಗ

          ಹಲವಾರು ಮಂದಿ ಕೇಳುತ್ತಿರುತ್ತಾರೆ, ಪೂರ್ವರಂಗ ಯಾಕಿಲ್ಲ? ಪ್ರಶ್ನೆ ಸಹಜ. ಹಿಂದೆಲ್ಲಾ ಪೂರ್ವರಂಗದಲ್ಲಿ ಕುಣಿದು, ಅಭ್ಯಾಸಗೊಂಡು ಪಕ್ವಗೊಂಡ ಬಳಿಕವಷ್ಟೇ ಪ್ರಸಂಗಗಳಿಗೆ ವೇಷ ಮಾಡಲು ಅರ್ಹತೆ ಬರುತ್ತಿತ್ತು. ಬಹುತೇಕ ಹಿರಿಯ ಕಲಾವಿದರು ಪೂರ್ವರಂಗದಲ್ಲೇ ಬೆಳೆದು ಬಂದವರು. ಈಗ ಪರಿಸ್ಥಿತಿ ಬದಲಾಗಿದೆ. ಕಲಾವಿದನಿಗೆ ನಾಟ್ಯ ಸಂಬಂಧಿ ವಿಚಾರದಲ್ಲಿ ಮೇಳದಲ್ಲಿ ಕಲಿಯಲು ಏನಿಲ್ಲ? ಯಾಕೆ - ಎಲ್ಲರೂ ಕಲಿತೇ ಬಂದಿರುತ್ತಾರೆ!

          ಇಡೀ ರಾತ್ರಿಯ ಆಟಕ್ಕೆ ಪೂರ್ವರಂಗ ಬೇಕು. ಆದರೆ ಗಮನಿಸಿ, ರಾತ್ರಿ ಸುಮಾರು ಎಂಟೂವರೆ ಗಂಟೆಯಿಂದ ಹತ್ತು ಗಂಟೆ ತನಕ ಪೂರ್ವರಂಗ ಈಗಲೂ ಮೇಳಗಳಲ್ಲಿ ಪ್ರದರ್ಶಿತವಾಗುತ್ತಿವೆ. ಎಷ್ಟು ಮಂದಿ ಅದನ್ನು ಯಕ್ಷಗಾನವಾಗಿ ನೋಡುತ್ತಾರೆ! ಅದೊಂದು ಸಮಯ ಕೊಲ್ಲುವ ಪ್ರಕಾರವೆಂದು ಜನರಾಡಿಕೊಳ್ಳುವುದನ್ನು ಕೇಳಿದರೆ ವಿಷಾದವಾಗುತ್ತದೆ. ಎಷ್ಟು ಮಂದಿ ಕಲಾವಿದರಿಗೆ ಪೂರ್ವರಂಗ ಕುಣಿಯಲು ಗೊತ್ತು?  ಆದರೆ ಒಂದು ಸಮಾಧಾನ. ಕಟೀಲಿನಂತ ಕ್ಷೇತ್ರದಲ್ಲಿ ಪೂರ್ವರಂಗವನ್ನು ಉಳಿಸಲು, ಅದರ ವೈಭವವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಯತ್ನ ನಡೆಯುತ್ತಿರುವುದು ಶ್ಲಾಘನೀಯ.

ವೇಗ-ಮಿತಿ :

ಕಾಲಮಿತಿಯಲ್ಲಿ ವೇಗದ ಮಿತಿ ಕಷ್ಟ. ಸ್ವಲ್ಪ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಆರಂಭದಿಂದಲೇ ವೇಗ ಪಡೆದುಕೊಳ್ಳುವ ಪ್ರಸಂಗಕ್ಕೆ ಕಾಲದ ಮಿತಿಯಲ್ಲಿ ಮುಗಿಸುವ ಆತುರವಿರುತ್ತದೆ. ಪಾತ್ರಸ್ವಭಾವಕ್ಕೆ ಅನುಗುಣವಾದ ವೇಗವನ್ನು ಕಾಲಮಿತಿಯಲ್ಲೂ ತರುತ್ತಿದ್ದೇವೆ.

          ದೇವೇಂದ್ರನ ಒಡ್ಡೋಲಗದ ಎಲ್ಲಾ ಪದ್ಯಗಳನ್ನು ಪಾರಂಪರಿಕ ರೀತಿಯಲ್ಲಿ ಹಾಡಿ, ವೇಷಗಳನ್ನು ಕುಣಿಸಿದರೆ ಏನಿಲ್ಲವೆಂದರೂ ನಲವತ್ತರಿಂದ ನಲವತ್ತೈದು ನಿಮಿಷ ಬೇಕು. ಕಾಲಮಿತಿ ಪ್ರದರ್ಶನದ ಮಿತಿಯೇ ನಾಲ್ಕು, ನಾಲ್ಕೂವರೆ ಗಂಟೆ. ಅದರಲ್ಲಿ ಮುಕ್ಕಾಲು ಗಂಟೆ ದೇವೇಂದ್ರಾದಿಗಳಿಗೆ ಮೀಸಲಿಟ್ಟರೆ  ಪ್ರಸಂಗದ ಮುಂದಿನ ಓಟ ಹೇಗೆ? ಇಲ್ಲಿಯೂ ಎಡಿಟಿಂಗ್ ಮಾಡಿಕೊಂಡಿದ್ದೇವೆ.

          ಮಾಂಬಾಡಿಯವರಂತಹ ಮಹಾನ್ ಗುರುಗಳಲ್ಲಿ ಕಲಿತ ನಿಧಾನ ಲಯದ ಪದ್ಯಗಳನ್ನು ಹೇಳಲು ಇಷ್ಟ. ಕೆಲವೊಮ್ಮೆ ರಂಗದಲ್ಲಿ ಕಲಾವಿದರ ನಡೆಗೆ ಅನುಗುಣವಾಗಿ ಪದ್ಯಗಳನ್ನು ಲಂಬಿಸುವ, ಹೃಸ್ವಗೊಳಿಸುವ ಕ್ಷಣಗಳು ಬರುತ್ತವೆ. ಅಂತಹ ಹೊತ್ತಲ್ಲಿ ಪಾತ್ರಗಳು ವಿಜೃಂಭಿಸುತ್ತವೆ. ಆದರೆ ಪದ್ಯ....?!  ಇಲ್ಲಿ ಪ್ರದರ್ಶನದ ಒಟ್ಟಂದಕ್ಕೆ ಮಹತ್ವ ಕೊಡಬೇಕಾಗುತ್ತದೆ. 

          ಈಗೀಗ ಸಮಗ್ರ ಯಕ್ಷಗಾನವನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ರಂಗದ ಒಂದೊಂದು ಅಂಗವನ್ನು ಆಸ್ವಾದಿಸುವ ಯುವ ಪ್ರೇಕ್ಷಕರ ಸಂಖ್ಯೆ ಅಧಿಕ. ಉದಾ? ಪದ್ಯ, ಚೆಂಡೆ, ಮದ್ದಳೆ, ಧೀಂಗಿಣ,  ಸ್ತ್ರೀಪಾತ್ರ, ಹಾಸ್ಯ, ಬಣ್ಣದವೇಷ.. ಹೀಗೆ ಒಬ್ಬೊಬ್ಬರಿಗೆ ಒಂದೊಂದು ವಿಭಾಗಗಳು ಇಷ್ಟ. ಇಂತಹ ಕ್ರಮಗಳು ಮೊದಲೂ ಇದ್ದುವು. ಈಗ ತೀರಾ ಅಧಿಕವೆಂದು ಕಾಣುತ್ತದೆ.

          ಕಾಲಮಿತಿಯಿಂದ ಕಲಾವಿದರಿಗೆ ಅನುಕೂಲವಾಗಿದೆ. ಆಟ ಮುಗಿಸಿ ರಾತ್ರಿ ಮನೆ ಸೇರುವವರಿಗೆ ಪ್ರಯೋಜನ. ಮಧ್ಯ ರಾತ್ರಿ ಬಳಿಕ ಇನ್ನೊಂದು ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳುವವರಿಗೂ ಸಂಪಾದನೆ ದೃಷ್ಟಿಯಿಂದ ಓಕೆ. ಆದರೆ ಎರಡೂ ಕಡೆಯ ಪ್ರದರ್ಶನಗಳಿಗೆ ನ್ಯಾಯ ಸಲ್ಲಿಸುವ ಬದ್ಧತೆಯನ್ನು ರೂಢಿಸಿಕೊಳ್ಳುವುದು ಅಗತ್ಯ. ಎರಡೆರಡು ಆಟಗಳಿದ್ದಾಗ ಒತ್ತಡವಾಗುವುದು ಸಹಜ. ಒತ್ತಡದ ಬದುಕು ನಿತ್ಯವಾದರೆ ಆರೋಗ್ಯಕ್ಕೂ ಮಾರಕ. ಆರೋಗ್ಯ ಭಾಗ್ಯವಾಗದಿದ್ದರೆ ಏನು ಪ್ರಯೋಜನ?

(ಚಿತ್ರಕೃಪೆ : ಮಧುಸೂದನ ಅಲೆವೂರಾಯ)


No comments:

Post a Comment